ಬೆಂಗಳೂರು : ಸಿನಿಮಾ, ಟಿವಿ ನಟ-ನಟಿಯರ ಮೇಲೆ ಅಭಿಮಾನ ಎಲ್ಲರಿಗೂ ಇರುವುದು ಸಾಮಾನ್ಯ. ಮೆಚ್ಚಿನ ನಟ-ನಟಿಯರನ್ನು ಒಮ್ಮೆ ಭೇಟಿ ಮಾಡಬೇಕೆನ್ನುವ ಕಾತುರ ಎಲ್ಲರ ಮನದಲ್ಲಿ ಇರುವುದು ಸಹಜ. ಆದರೆ ಬೆಂಗಳೂರಿನ 13 ವರ್ಷದ ಬಾಲಕಿ ಮೆಚ್ಚಿನ ನಟನನ್ನು ನೋಡಲು ಮನೆಯವರಿಗೆ ತಿಳಿಸದೇ ದೆಹಲಿ ರೈಲು ಹತ್ತಿದ್ದಾಳೆ.
ಟಿವಿಯಲ್ಲಿ ಪ್ರಸಾವಾಗುತ್ತಿರುವ ‘ರಾಧಾ-ಕೃಷ್ಣ’ ಧಾರಾವಾಹಿಯಲ್ಲಿ ಕೃಷ್ಣನ ಸುಂದರತೆಗೆ ಮಾರುಹೋಗಿ ಆತನನ್ನು ಅರಸಿ ಬೆಂಗಳೂರಿನಿಂದ ಒಬ್ಬಳೇ ದೆಹಲಿಗೆ ಹೋಗಿದ್ದಾಳೆ.
ಈಕೆ ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದ ಬಾಲಕಿಯಾಗಿದ್ದು, ಕೃಷ್ಣನನ್ನು ನೋಡಲೆಂದು ಬೆಂಗಳೂರಿನಲ್ಲಿ ಮನೆ ಬಿಟ್ಟು, ದೆಹಲಿಗೆ ರೈಲು ಹತ್ತಿದ್ದಾಳೆ. ಆಕೆಯ ವರ್ತನೆ, ಆಕೆಯ ಬಳಿ ಲಗೇಜು ಇಲ್ಲದಿರುವುದು, ಊಟ-ತಿಂಡಿಗೆ ಹಣ ಇಲ್ಲದಿರುವುದು ಗಮನಿಸಿದ ಪ್ರಯಾಣಿಕರಿಗೆ ಅನುಮಾನ ಬಂದಿದೆ.
ಆಕೆಯ ಬಗ್ಗೆ ವಿಚಾರಿಸಿದ ಪ್ರಯಾಣಿಕರಿಗೆ, ತಾನು ದೆಹಲಿಯಲ್ಲಿ ಅಜ್ಜಿಯ ಮನೆಯಲ್ಲಿದ್ದೆ. ನಂತರ ಲಾಕ್ಡೌನ್ ಅವಧಿಯಲ್ಲಿ ಬೆಂಗಳೂರಿನಲ್ಲಿದ್ದೆ. ಈಗ ದೆಹಲಿಗೆ ವಾಪಸ್ ಹೋಗುತ್ತಿದ್ದೇನೆ ಎಂದಿದ್ದಾಳೆ.
ಆಕೆಯ ಉತ್ತರದಿಂದ ತೃಪ್ತರಾಗದ ಪ್ರಯಾಣಿಕರು, ರೈಲ್ವೆ ಪೊಲೀಸರಿಗೆ ಆಕೆಯನ್ನು ಒಪ್ಪಿಸಿದ್ದಾರೆ. ರೈಲ್ವೆ ಪೊಲೀಸರು ಬಾಲಕಿಯನ್ನು ವಿಚಾರಿಸಿ, ‘ರಾಧಾ-ಕೃಷ್ಣ’ ಧಾರಾವಾಹಿಯಲ್ಲಿ ರಾಧೆಯು ಕೃಷ್ಣನನ್ನು ಹುಡುಕಿ ಬೇರೆಡೆ ಹೋಗುತ್ತಾಳೆ. ಅದರಿಂದ ಪ್ರೇರಣೆಗೊಂಡು ನಾನು ಕೃಷ್ಣ ಪಾತ್ರಧಾರಿಯನ್ನು ಹುಡುಕಿಕೊಂಡು ಹೋಗುತ್ತಿದ್ದೇನೆ’ ಎಂದು ಹೇಳಿದ್ದಾಳೆ.
ಈ ಕಡೆ ಬೆಂಗಳೂರಿನಲ್ಲಿ ಬಾಲಕಿಯ ಪೋಷಕರು ಮಗಳು ಕಾಣದಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ರೈಲ್ವೆ ಪೊಲೀಸರು, ಬೆಂಗಳೂರು ಪೊಲೀಸರನ್ನು ಸಂಪರ್ಕ ಮಾಡಿ, ಬಾಲಕಿಯ ಪೋಷಕರು ಮಗಳನ್ನು ಕರೆದೊಯ್ಯಲು ದೆಹಲಿಗೆ ಹೋಗುತ್ತಿದ್ದಾರೆ.
ಆನ್ಲೈನ್ ತರಗತಿಗೆಂದು ಬಾಲಕಿಯ ಪೋಷಕರು ಆಕೆಗೆ ಮೊಬೈಲ್ ಕೊಟ್ಟಿದ್ದರು. ಆದರೆ ಬಾಲಕಿಯು ಧಾರಾವಾಹಿ ವೀಕ್ಷಣೆ, ಮಾಡಿ ದಾರಿತಪ್ಪಿದ್ದಾಳೆ ಎನ್ನಲಾಗಿದೆ.