ಗುಜರಾತ್ನ ಕರುಣಾ ಫೌಂಡೇಶನ್ ಮಾದರಿಯಲ್ಲಿ ಕರ್ನಾಟಕದಲ್ಲೂ ಕಾರ್ಯ ನಿರ್ವಹಣೆ
ಬೆಂಗಳೂರು: ಗುಜರಾತಿನ ರಾಜ್ ಕೋಟ್ನ ಕರುಣಾ ಫೌಂಡೇಷನ್ ಸಂಸ್ಥೆಯು ಕಳೆದ ಹಲವಾರು ವರ್ಷಗಳಿಂದ ರಾಜ್ ಕೋಟ್ ನಗರದಲ್ಲಿ ಉಚಿತ ಪಶು ಆಂಬುಲೆನ್ಸ್, ನಿಶುಲ್ಕ ದೂರವಾಣಿ ಕರೆ ಸಂಖ್ಯೆ 1962, ಹಾಗೂ ಕಾಲ್ ಸೆಂಟರ್, ಪಶು ಆಸ್ಪತ್ರೆ ನಡೆಸುತ್ತಾ ಪ್ರತಿ ವರ್ಷವೂ ಸುಮಾರು 65 ಸಾವಿರ ಪಶುಗಳ ಆರೋಗ್ಯ ಕಾಪಾಡಿ ಜೀವದಾನ ನೀಡಿದ್ದಾರೆ. ಈ ಸಂಸ್ಥೆಯ ಉಚಿತ ಕಾರ್ಯ, ಅದರ ಶ್ರೇಯಸ್ಸು ಹಾಗೂ ಯಶಸ್ಸು ನೋಡಿ ಗುಜರಾತ್ ಮಖ್ಯಮಂತ್ರಿ ವಿಜಯ ರುಪಾಣಿ ಅವರು ಈ ಯೋಜನೆಯನ್ನು ಮಾದರಿಯಾಗಿ ಬಳಸಿ ಸಂಪೂರ್ಣ ಗುಜರಾತ್ ರಾಜ್ಯದಾದ್ಯಂತ ಪ್ರತಿ ತಾಲೂಕುಗಳಿಗೂ ವಿಸ್ತರಿಸಿ 4೦೦ ಕರುಣಾ ಪಶು ಆಂಬುಲೆನ್ಸ್ ಯೋಜನೆ ಜಾರಿಗೆ ತಂದರು.
ಕಳೆದ ವರ್ಷ ಒಂದರಲ್ಲಿ ಸುಮಾರು 6 ಲಕ್ಷ ಪಶುಗಳನ್ನು ಉತ್ತಮ ತುರ್ತು ಆರೋಗ್ಯ ನೀಡಿ ರಕ್ಷಣೆ ಮಾಡಲಾಗಿದೆ. ಈಗ ಉಚಿತ 1962 ಕರೆ ಹಾಗೂ ಕರುಣಾ ಪಶು ಆಂಬುಲೆನ್ಸ್ ಯೋಜನೆ ಅತ್ಯಂತ ಯಶಸ್ಸು ಕಂಡ ಯೋಜನೆಯಾಗಿದೆ, ಹಾಗೂ ಗುಜರಾತ್ ಸರ್ಕಾರ ವಾರ್ಷಿಕ ಬಜೆಟ್ ನಲ್ಲಿ ರೂ. 676 ಕೋಟಿಗೂ ಅಧಿಕ ನೀಡುತ್ತದೆ.
ಪಶು ಸಂಜೀವಿನಿ ಆಂಬುಲೆನ್ಸ್ ಮತ್ತು ಆಸ್ಪತ್ರೆ ಯೋಜನೆಯನ್ನು ರಾಜ್ಯದ ಎಲ್ಲಾ ತಾಲೂಕುಗಳಿಗೂ ವಿಸ್ತರಿಸಲು ಸೂಕ್ತ ಸಂಪನ್ಮೂಲವನ್ನು ಸದ್ಯದಲ್ಲೇ ರೂಪಿಸಲಾಗುವುದು. ಈ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಬೇಕಾದ ಉತ್ತಮ ಸಲಹೆ, ಮಾರ್ಗದರ್ಶನ ಮತ್ತು ತರಬೇತಿಗಳಿಗೆ ಅಗತ್ಯಬಿದ್ದಾಗ ಈ ಕಾರ್ಯ ಯೋಜನೆಯಲ್ಲಿ ಅತ್ಯಂತ ಯಶಸ್ಸು ಕಂಡ ಪ್ರತಿಷ್ಠಿತ ಕರುಣಾ ಫೌಂಡೇಷನ್ ಇದರ ಸಹಾಯ ಪಡೆಯಲಾಗುವುದು ಎಂದು ಪಶು ಸಂಗೋಪನಾ ಸಚಿವ ಪ್ರಭು ಬಿ. ಚವ್ಹಾಣ ಅವರು ಹೇಳಿದರು.
ಕರ್ನಾಟಕ ಸರ್ಕಾರ ಇತ್ತೀಚೆಗೆ ಪ್ರಾರಂಭಿಸಿರುವ ಪಶು ಸಂಜೀವಿನಿ ಆಂಬುಲೆನ್ಸ್ ಮತ್ತು ಆಸ್ಪತ್ರೆ ಯೋಜನೆ ಯಶಸ್ಸು ಕಾಣಲು ಬೇಕಾದ ಸೂಕ್ತ ಕಾರ್ಯಯೋಜನೆಗಳ ಕುರಿತು ಕರುಣಾ ಫೌಂಡೇಶನ್ ಪ್ರತಿನಿಧಿಗಳು ಪಶು ಸಂಗೋಪನಾ ಸಚಿವರಾದ ಪ್ರಭು ಬಿ. ಚವ್ಹಾಣ ಅವರನ್ನು ಮಾರ್ಚ್ 03, 2021ರಂದು ಬೆಂಗಳೂರಲ್ಲಿ ಸಚಿವರ ಕಚೇರಿಯಲ್ಲಿ ಭೇಟಿಯಾಗಿ ಅನುಭವ, ಸಲಹೆ ಹಾಗೂ ಮಾಹಿತಿ ವಿನಿಮಯ ಮಾಡಿದರು.
ಈ ನಿಟ್ಟಿನಲ್ಲಿ ಸಿಬ್ಬಂದಿ ವರ್ಗಕ್ಕೆ ಬೇಕಾದ ಅತ್ಯಾಧುನಿಕ ತರಬೇತಿಯನ್ನು ಉಚಿತವಾಗಿ ನೀಡುವ ಭರವಸೆಯನ್ನು ಸಚಿವರಿಗೆ ಕರುಣಾ ಫೌಂಡೇಷನ್ ತಂಡ ನೀಡಿದೆ.
ಕರುಣಾ ಫೌಂಡೇಶನ್ ರಾಜ್ ಕೋಟ್ ಗುಜರಾತ್ ಇದರ ಪ್ರತೀಕ್ ಸಂಘಾನಿ, ರಮೇಶ್ ಥಕ್ಕರ್, ಧೀರೇಂದ್ರ ಕನಬರ್, ಬೆಂಗಳೂರಿನ ಮಾದ್ಯಮ ಸಲಹೆಗಾರ ನಾರಾಯಣ ಪ್ರಸಾದ್ ಹಾಗೂ ಅಖಿಲ ಕರ್ನಾಟಕ ಪ್ರಾಣಿ ದಯಾ ಸಂಘ, ಬೆಂಗಳೂರು ಇದರ ಕಾರ್ಯದರ್ಶಿ ಸುನಿಲ್ ದುಗರ್ ಇವರ ನೇತೃತ್ವದ ಪ್ರತಿನಿಧಿಗಳು ಭಾಗವಹಿಸಿದ್ದರು.
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಉಪಯುಕ್ತ ನ್ಯೂಸ್ ಸಿಗ್ನಲ್ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್ ಬಳಸಿ