ಬೆಂಗಳೂರು : “ಕರ್ನಾಟಕ ಬಂದ್ ದಿನ ಬಿಬಿಎಂಪಿ ವ್ಯಾಪ್ತಿಯಲ್ಲಿನ ಅಂಗಡಿ ಮಳಿಗೆಗಳನ್ನು ಮುಚ್ಚಿಸುವಂತಿಲ್ಲ. ಒತ್ತಾಯ ಪೂರ್ವಕ ಯಾರಾದರೂ ಬಂದ್ ಮಾಡಿಸಿದರೆ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.
ಇದೀಗ ಕರ್ನಾಟಕ ಸರ್ಕಾರ ಮರಾಠ ಅಭಿವೃದ್ಧಿ ನಿಗಮ ರಚನೆಗೆ ನೀಡಿರುವ ಆದೇಶ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ಡಿಸೆಂಬರ್ 5 ರಂದು ಶನಿವಾರ ಕರ್ನಾಟಕ ಬಂದ್ಗೆ ಕನ್ನಡ ಒಕ್ಕೂಟ ಸಂಘಟನೆ ಕರೆ ನೀಡಿದೆ.
“ಪಾಲಿಕೆ ವ್ಯಾಪ್ತಿಯಲ್ಲಿ ಯಾರೂ ಸಹ ಬಲವಂತದಿಂದ ಬಂದ್ ಮಾಡಿಸುವಂತಿಲ್ಲ. ವ್ಯಾಪಾರಿಗಳಿಗೆ ಕಿರಿಕಿರಿ ನೀಡುವಂತಿಲ್ಲ. ತೊಂದರೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಬಿಬಿಎಂಪಿ ಆಯುಕ್ತರು ಹೇಳಿದ್ದಾರೆ.
ಕನ್ನಡ ಪರ ಸಂಘಟನೆಗಳು ಈಗಾಗಲೇ ಬಂದ್ ಮಾಡಲು ನಿರ್ಧಾರ ಕೈಗೊಂಡಿವೆ. ಶನಿವಾರ ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯ ತನಕ ಬಂದ್ ನಡೆಯಲಿದೆ. ವಿವಿಧ ಸಂಘಟನೆಗಳು ಈಗಾಗಲೇ ಬಂದ್ಗೆ ಬೆಂಬಲ ಸೂಚಿಸಿವೆ.