ಧರ್ಮಸ್ಥಳ: ಮಂಗಳೂರು ಮಹಾನಗರ ಪಾಲಿಕೆಯ ರಸ್ತೆಗೆ ವಿಜಯಾಬ್ಯಾಂಕ್ ಸ್ಥಾಪಕಾಧ್ಯಕ್ಷರಾದ ಮೂಲ್ಕಿ ಎಂ ಸುಂದರ ರಾಮ ಶೆಟ್ಟರ ಹೆಸರು ನಾಮಕರಣ ಮಾಡಿರುವುದುನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅಭಿನಂದಿಸಿದ್ದಾರೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಶೆಟ್ಟರು ಮಾಡಿದ ಸಾಧನೆಗಳನ್ನು ಸ್ಮರಿಸಿರುವ ಹೆಗ್ಗಡೆಯವರು, ಕೆಲಕಾಲ ಅವರ ಜತೆ ಬ್ಯಾಂಕಿನ ನಿರ್ದೇಶಕರಾಗಿ ತಾವು ಕೆಲಸ ಮಾಡಿದ ದಿನಗಳನ್ನೂ ಸ್ಮರಿಸಿಕೊಂಡಿದ್ದಾರೆ.
ಮಂಗಳೂರು ನಗರದ ಹಂಪನಕಟ್ಟೆಯಿಂದ ಜ್ಯೋತಿ ಸರ್ಕಲ್ ಕಡೆಗೆ ಸಾಗುವ ಲೈಟ್ ಹೌಸ್ ಹಿಲ್ ರಸ್ತೆ ಹೆಸರಾಗಿದ್ದ ರಸ್ತೆಗೆ ನಗರ ಪಾಲಿಕೆ ಇಂದು ಮೂಲ್ಕಿ ಸುಂದರ ರಾಮ ಶೆಟ್ಟರ ಹೆಸರು ನಾಮಕರಣ ಮಾಡುವ ಮೂಲಕ ಗೌರವ ಸಲ್ಲಿಸಿದೆ.
ಹೆಗ್ಗಡೆಯವರು ಮಹಾನಗರಪಾಲಿಕೆಗೆ ಬರೆದ ಪತ್ರದ ಪೂರ್ಣ ಪಾಠ ಇಲ್ಲಿದೆ:
ಪುರಸಭಾಧ್ಯಕ್ಷರು,
ಮಂಗಳೂರು ಮಹಾನಗರ ಪಾಲಿಕೆ,
ಮಂಗಳೂರು.
ಮಾನ್ಯ ಪುರಸಭಾಧ್ಯಕ್ಷರಿಗೆ,
ವಿಜಯಾಬ್ಯಾಂಕ್ನ ಸ್ಥಾಪಕಾಧ್ಯಕ್ಷÀರಾದ ಮೂಲ್ಕಿ ಶ್ರೀ ಸುಂದರ ರಾಮ ಶೆಟ್ಟಿಯವರ ಹೆಸರನ್ನು ಮಂಗಳೂರು ಮಹಾನಗರ ಪಾಲಿಕೆಯ ರಸ್ತೆಗೆ ಇಂದು ಮರುನಾಮಕರಣ ಮಾಡುತ್ತಿರುವುದು ತಿಳಿಯಿತು.
ಮೂಲ್ಕಿ ಶ್ರೀ ಎಂ. ಸುಂದರ್ ರಾಮ್ ಶೆಟ್ಟಿಯವರ ಜೊತೆಗೆ ನಾನು ಕೆಲವು ವರ್ಷಗಳಲ್ಲಿ ವಿಜಯಾ ಬ್ಯಾಂಕ್ನ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೆ. ಶ್ರೀಯುತರ ತೀಕ್ಷ್ಣಮತಿ, ಬ್ಯಾಂಕ್ ಮತ್ತು ಇನ್ಸುರೆನ್ಸ್ ಬಗ್ಗೆ ಮಾಹಿತಿ, ಶೀಘ್ರ ನಿರ್ಧಾರ ಪ್ರಸಿದ್ಧವಾದದ್ದು. ಬ್ಯಾಂಕ್ನ ಅಧ್ಯಕ್ಷರಿಗಿದ್ದ ಸ್ವಾತಂತ್ರ್ಯವನ್ನು ಬಳಸಿ ಸಾವಿರಾರು ಯುವಕರಿಗೆ ಉದ್ಯೋಗಾವಕಾಶ ನೀಡಿದರು. ಭಾರತ ದೇಶದ ಎಲ್ಲಾ ರಾಜ್ಯಗಳಲ್ಲೂ ಶಾಖೆಗಳನ್ನು ತೆರೆದು ಗಮನಾರ್ಹ ಪ್ರಗತಿಯನ್ನು ಸಾಧಿಸಿದರು. ಇಂದು ವಿಜಯಾ ಬ್ಯಾಂಕ್ ಬ್ಯಾಂಕ್ ಆಫ್ ಬರೋಡದೊಂದಿಗೆ ಲೀನವಾಗಿ ತನ್ನ ಹೆಸರು ಮರೆ ಮಾಚಿ ಹೋದಾಗ ಶ್ರೀ ಶೆಟ್ಟಿಯವರ ಸೇವೆ ಮತ್ತು ಅವರ ಹೆಸರು ರಸ್ತೆಗೆ ನಾಮಕರಣ ಮಾಡಿರುವುದು ಅತ್ಯಂತ ಸೂಕ್ತವಿದೆ. ನಮ್ಮೆಲ್ಲರಿಗೂ ಸಂತೋಷವಾಗಿದೆ. ಈ ಕಾರ್ಯ ಮಾಡಿದ ಮಂಗಳೂರು ಮಹಾನಗರ ಪಾಲಿಕೆಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ.
ಇತಿ,
(ಡಿ.ವೀರೇಂದ್ರ ಹೆಗ್ಗಡೆಯವರು)