ರೆಡ್ಕ್ರಾಸ್ ಸಂಸ್ಥೆಯಿಂದ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ
ಮಂಗಳೂರು: ಪ್ರಸಕ್ತ ಕೋವಿಡ್-19 ಪರಿಸ್ಥಿತಿಯಲ್ಲಿ ರಕ್ತ ಹಾಗೂ ಪ್ಲಾಸ್ಮಾ ದಾನದ ಬಗ್ಗೆ ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಿಸುವ ಕೆಲಸವಾಗಬೇಕಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಕಾರಿ ಡಾ. ಕೆ. ವಿ. ರಾಜೇಂದ್ರ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಭಾರತೀಯ ರೆಡ್ಕ್ರಾಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಮತ್ತು 100ಕ್ಕೂ ಅಧಿಕ ರಕ್ತದ ಯುನಿಟ್ಗಳನ್ನು ಸಂಗ್ರಹಿಸಿದ ಸಂಘ ಸಂಸ್ಥೆಗಳು ಮತ್ತು ಪ್ರತಿನಿಗಳನ್ನು ಅಭಿನಂದಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಕ್ತದಾನದಂತಹ ಮಾನವೀಯ ಕಾರ್ಯದಲ್ಲಿ ಸಂಘ ಸಂಸ್ಥೆಗಳು ಹೆಚ್ಚು ತೊಡಗಿಸಿಕೊಳ್ಳಬೇಕು. ರೆಡ್ಕ್ರಾಸ್ ನೇತೃತ್ವದಲ್ಲಿ ಪ್ರತಿ ಗ್ರಾ.ಪಂ. ಮಟ್ಟದಲ್ಲಿ ರಕ್ತದಾನ ಮತ್ತು ಪ್ಲಾಸ್ಮಾ ದಾನಕ್ಕೆ ಪೂರಕವಾದ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಲಿದೆ ಎಂದರು.
ಜಿಲ್ಲೆಯಲ್ಲಿ ಈಗಾಗಲೇ ಕೋವಿಡ್ನಿಂದ 18 ಸಾವಿರ ಮಂದಿ ಗುಣಮುಖರಾಗಿದ್ದಾರೆ. ಸಕ್ಕರೆ ಕಾಯಿಲೆ ಮತ್ತಿತರ ಸಮಸ್ಯೆಗಳನ್ನು ಎದುರಿಸುತ್ತಿದ್ದ ಶೇ.50ರಷ್ಟು ಮಂದಿ ಗುಣಮುಖರಾಗಿದ್ದಾರೆ. ಜಾಗೃತಿ ಮತ್ತು ಮಾಸ್ಕ್ ಬಳಕೆಯಿಂದ ಕೋವಿಡ್ ಸೋಂಕು ಹರಡದಂತೆ ತಡೆಗಟ್ಟಬಹುದು. ಪ್ಲಾಸ್ಮಾ ದಾನಿಗಳ ಸಂಖ್ಯೆ ಹೆಚ್ಚಾದಲ್ಲಿ ಕೋವಿಡ್ ರೋಗಿಗಳು ಶೀಘ್ರ ಗುಣಮುಖರಾಗಲು ಸಾಧ್ಯ. ಈ ರೋಗಿಗಳಿಗೆ ಜೀವದಾನ ಮಾಡಿದ ಪುಣ್ಯದ ಕೆಲಸವನ್ನು ದಾನಿಗಳು ಮಾಡಬೇಕು ಎಂದು ಅವರು ಹೇಳಿದರು.
ಇದೇ ಸಂದರ್ಭ 100ಕ್ಕೂ ಅಧಿಕ ರಕ್ತದ ಯುನಿಟ್ಗಳನ್ನು ಸಂಗ್ರಹಿಸಿದ 18 ಸಂಘ ಸಂಸ್ಥೆಗಳನ್ನು ಗೌರವಿಸಲಾಯಿತು. ಕೊರೊನಾ ಸೋಂಕಿತರಿಗೆ ಪ್ಲಾಸ್ಮಾ ನೀಡಿದವರ ಪೈಕಿ 10 ಮಂದಿಯನ್ನು ಸಾಂಕೇತಿಕವಾಗಿ ಗೌರವಿಸಲಾಯಿತು.
ಬ್ಯಾಂಕ್ ಆಫ್ ಬರೋಡ ಮಂಗಳೂರು ವಲಯ ಮುಖ್ಯಸ್ಥ ಸುಜಯಾ ಯು.ಶೆಟ್ಟಿ ಮಾತನಾಡಿ, ದ.ಕ ಜಿಲ್ಲಾಡಳಿತ ಮತ್ತು ರೆಡ್ಕ್ರಾಸ್ ಸೊಸೈಟಿ ಆಫ್ ಇಂಡಿಯಾ ಜಿಲ್ಲಾ ಘಟಕಕ್ಕೆ ನಮ್ಮ ಬ್ಯಾಂಕ್ ಪೂರ್ಣ ಸಹಕಾರ ನೀಡಲಿದೆ. ಬ್ಯಾಂಕ್ನ ಎಲ್ಲಾ ಶಾಖೆಗಳಲ್ಲಿ ರಕ್ತದಾನ ಮಾಡುವ ಮತ್ತು ಪ್ಲಾಸ್ಮಾದಾನ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುವುದು ಎಂದರು.
ರೆಡ್ಕ್ರಾಸ್ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲಾಧಿಕಾರಿಯವರ ನಿರಂತರ ಪ್ರೋತ್ಸಾಹದಿಂದ ರೆಡ್ಕ್ರಾಸ್ ಅತ್ಯಂತ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದು, ಸ್ವಂತ ಕಟ್ಟಡದ ಯೋಜನೆಗೆ ಎಲ್ಲರ ಸಹಕಾರ ಬೇಕು ಎಂದರು. ಪ್ರೊಬೆಷನರಿ ಐಎಎಸ್ ಅಧಿಕಾರಿ ಮೋನಾ ರಾವ್, ಬ್ಲಡ್ ಬ್ಯಾಂಕ್ ಉಪಸಮಿತಿ ಮುಖ್ಯಸ್ಥ ಡಾ.ಯು.ವಿ.ಶೆಣೈ ಉಪಸ್ಥಿತರಿದ್ದರು. ರೆಡ್ಕ್ರಾಸ್ ದ.ಕ. ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಎಸ್.ಎ.ಪ್ರಭಾಕರ ಶರ್ಮ ಸ್ವಾಗತಿಸಿದರು. ಯತೀಶ್ ಬೈಕಂಪಾಡಿ ಕಾರ್ಯಕ್ರಮ ನಿರೂಪಿಸಿದರು.
ವೆನ್ಲಾಕ್ನಲ್ಲಿ ಶೀಘ್ರ ಪ್ಲಾಸ್ಮಾ ಥೆರಪಿ
ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಥೆರಪಿ ಚಿಕಿತ್ಸೆಯನ್ನು ಶೀಘ್ರ ಆರಂಭಿಸಲಾಗುವುದು. ಇದಕ್ಕೆ ಅಗತ್ಯಯಂತ್ರಗಳು ಈಗಾಗಲೇ ಬಂದಿದ್ದು, ಸರಕಾರದಿಂದ ಅನುಮತಿ ದೊರೆತಾಕ್ಷಣ ಚಾಲನೆ ದೊರೆಯಲಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ.ಕೆ. ವಿ. ರಾಜೇಂದ್ರ ತಿಳಿಸಿದರು.
ಪ್ರಸಕ್ತ ಕೋವಿಡ್-19 ಸಂದರ್ಭ ಪ್ಲಾಸ್ಮಾದಾನದ ಬಗ್ಗೆ ರೆಡ್ಕ್ರಾಸ್ ಸಂಸ್ಥೆ ಸೇರಿದಂತೆ ನಾನಾ ಸಂಸ್ಥೆಗಳು ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕು. ರಕ್ತದಾನ ಹಾಗೂ ಪ್ಲಾಸ್ಮಾ ದಾನ ಮಾಡಲು ಬಯಸುವವರು ಭಾರತೀಯ ರೆಡ್ಕ್ರಾಸ್ ಸೊಸೈಟಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಬ್ಲಡ್ಬ್ಯಾಂಕ್ನ ಸಂಚಾಲಕರಾದ ಪ್ರವೀಣ್ ಕುಮಾರ್ ಅವರ ದೂರವಾಣಿ ಸಂಖ್ಯೆ 9916262459 ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು. ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ರೆಡ್ಕ್ರಾಸ್ ಸಂಸ್ಥೆ ಜತೆಯಾಗಿ ಪ್ಲಾಸ್ಮಾ ದಾನಿಗಳಿಗೆ ಸೂಕ್ತ ವ್ಯವಸ್ಥೆ ಮಾಡಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ತಿಳಿಸಿದರು.
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.