ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ದಿನಾಚರಣೆ
ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ದಿನಾಚರಣೆಯು ಮಂಗಳವಾರ ಕಾಲೇಜಿನ ಬಯಲು ರಂಗಮಂದಿರದಲ್ಲಿ ನಡೆಯಿತು. ಹಿರಿಯ ವಿದ್ಯಾರ್ಥಿಗಳಿಂದ ‘ಹಿರಣ್ಯಾಕ್ಷ’ ಎಂಬ ಯಕ್ಷಗಾನ ಪ್ರಸಂಗವು ಅದ್ಭುತವಾಗಿ ಮೂಡಿ ಬಂತು.
ಕಾಲೇಜಿನ ಆರಂಭದ ವರ್ಷ ವಿದ್ಯಾರ್ಥಿಯಾಗಿದ್ದ ಈಶ್ವರ ಉಪಾಧ್ಯಾಯರ ಇಂದ್ರನ ಪಾತ್ರ ಗಾಂಭೀರ್ಯವನ್ನು, ದೇವತೆಗಳೊಡೆಯನೆಂಬ ವೈಭವವು ಅತ್ಯುತ್ತಮವಾಗಿತ್ತು, ವರಾಹ ಪಾತ್ರವನ್ನು ಮಾಡಿದ ಭೀಮ ಭಾರದ್ವಾಜರು ಸಭೆಯಿಂದಲೇ ಎದ್ದು ಬಂದು ವೇದಿಕೆಯನ್ನು ಏರಿದ್ದು ರೋಚಕವಾಗಿತ್ತಲ್ಲದೆ, ಹಿರಣ್ಯಾಕ್ಷನೊಂದಿಗಿನ ಕಾಳಗ ಪ್ರೇಕ್ಷಕರನ್ನು ಸೆಳೆಯಿತು. ಹಿರಿಯ ವಿದ್ಯಾರ್ಥಿ ಡಾ. ಗೋವಿಂದ ಪ್ರಸಾದ ಕಜೆ ಅವರು ಹಿರಣ್ಯಾಕ್ಷನಾಗಿ ಆತನ ದರ್ಪ, ದುರಹಂಕಾರ, ವೈಭವವು ಕಣ್ಣಿಗೆ ಕಟ್ಟುವಂತಿತ್ತು.
ಅಗ್ನಿಯಾಗಿ ರಾಮಚಂದ್ರ ಭಟ್, ವರುಣನಾಗಿ ಕೇಶವ ಕೃಷ್ಣ ಪಾತ್ರಗಳನ್ನು ಚಂದಗಾಣಿಸಿದರು. ನಾರದ ಮತ್ತು ದೇವದೂತನಾಗಿ ಪೆರುವೋಡಿ ಅಶೋಕ ಸುಬ್ರಹ್ಮಣ್ಯ ಅವರು ತಮ್ಮ ಮಾತಿನ ಮೂಲಕ ಹಾಸ್ಯವನ್ನೂ ಮಾಡುತ್ತ ನೋಡುಗರನ್ನು ಮನರಂಜಿಸಿದರು, ವಿದ್ಯಾರ್ಥಿಯಾಗಿರುವ ಗುರುತೇಜ ಅವರು ಭೂದೇವಿಯಾಗಿ ಸ್ತ್ರೀ ವೇಷವನ್ನು ಅತ್ಯಂತ ಸುಂದರವಾಗಿ ನಿರ್ವಹಿಸಿದರು. ದಿತಿಯಾಗಿ ವಿದ್ಯಾರ್ಥಿನಿ ಸಂಧ್ಯಾಶ್ರೀ ಪಾತ್ರ ನಿರ್ವಹಿಸಿದರು.
ಮುರಳಿ ಶಾಸ್ತ್ರಿ ತೆಂಕಬೈಲು ಅವರ ಭಾಗವತರ ಕಂಠಿಸಿರಿ ಯಕ್ಷಪ್ರೇಮಿಗಳ ಮನತಣಿಸಿತು. ಚೆಂಡೆಯಲ್ಲಿ ಚಂದ್ರಶೇಖರ ಕೊಂಕಣಾಜೆ, ಮದ್ದಳೆಯಲ್ಲಿ ವರ್ಷಿತ್ ಕಿಜೆಕ್ಕಾರ್, ಚಕ್ರತಾಳದಲ್ಲಿ ರಮೇಶ ಕಜೆ ಸಹಕರಿಸಿದರು.
ಅಧ್ಯಾಪಕರಿಂದ ಸಾಂಸ್ಕೃತಿಕ ಕಾರ್ಯಕ್ರಮ
ಉಪನ್ಯಾಸಕಿಯರಾದ ಶರಣ್ಯಾ, ಅಕ್ಷತಾ, ಸುಮಂಗಲಾ, ಶ್ವೇತಾ, ವರ್ಷಾ ಮೊಳೆಯಾರ ಅವರು ಭರತನಾಟ್ಯ ಪ್ರದರ್ಶಿಸಿದರು. ವಾದ್ಯ ಸಂಗೀತ ಕಾರ್ಯಕ್ರಮದಲ್ಲಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ವಿ. ಬಾಲಕೃಷ್ಣ ಹೊಸಮನೆ ಮೃದಂಗದಲ್ಲಿ, ಶ್ರೀವರದ ವಯಲಿನ್ ನುಡಿಸುವ ಮೂಲಕ ಸಂಗೀತಲೋಕಕ್ಕೆ ಕೊಂಡೊಯ್ದರು. ವಿದ್ಯಾರ್ಥಿಗಳಾದ ರಶ್ಮಿ ಬನಾರಿ, ಆಶಿತ, ಶ್ರೀವರದ, ಶ್ರೀರಾಗ ಹೊಸಮೂಲೆ, ಕೀರ್ತಿ ಕುಡ್ವ, ವೈಷ್ಣವಿ ಅಡಿಗ, ದಾಸಕೀರ್ತನ ಗಾಯನವನ್ನು ಮಾಡುವ ಮೂಲಕ ದಾಸರ ತತ್ವಗಳನ್ನು ಸಾರಿದರು. ಉಪನ್ಯಾಸಕ ಅಶೋಕ್ ತಾಯಿಯ ಕುರಿತ ಹಾಡನ್ನು ಹಾಡುವ ಮೂಲಕ ಮನಸೆಳೆದರು.
(ಉಪಯುಕ್ತ ನ್ಯೂಸ್)
ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ