ಬೆಂಗಳೂರು: ಸುಳ್ಯ ಕ್ಷೇತ್ರದ ಜನರು ನನ್ನ 6 ಬಾರಿಗೆ ಗೆಲ್ಲಿಸಿದ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ. ಸಂಘ ತಮ್ಮನ್ನು ಈ ಮಟ್ಟಕ್ಕೆ ಬೆಳೆಸಿದೆ. ಮಾನ್ಯ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರೇ ಸ್ವತಃ ಕರೆ ಮಾಡಿ ಬೆಂಗಳೂರಿಗೆ ಬರುವಂತೆ ಹೇಳಿದ್ದಾರೆ ಎಂದು ಸುಳ್ಯ ಕ್ಷೇತ್ರದ ಶಾಸಕ, ಸಚಿವಾಕಾಂಕ್ಷಿ ಎಸ್.ಅಂಗಾರ ತಿಳಿಸಿದ್ದಾರೆ.
ಹಾಗೆಯೇ ಇಂದು ರಾಜಭವನದಲ್ಲಿ ಮೂರು ಗಂಟೆ ಸಮಯಕ್ಕೆ ಸುಳ್ಯ ಕ್ಷೇತ್ರದ ಶಾಸಕ ಎಸ್ ಅಂಗಾರ ಪ್ರಮಾಣ ವಚನ ಸ್ವೀಕರಿಸುವುದು ಖಚಿತವಾಗಿದೆ.
ತಮಗೆ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಅವಕಾಶ ಮಾಡಿಕೊಟ್ಟಿದ್ದಾರೆ. ತಮಗೆ ಯಾವ ಖೋಟಾದಲ್ಲಿಯೂ ಸಚಿವ ಸ್ಥಾನ ಕೊಟ್ಟಿಲ್ಲ. ಪಕ್ಷ ಸಂಘಟನೆ ನೋಡಿ ಕೊಟ್ಟಿದ್ದಾರೆ. ಯಾವುದೇ ಸಚಿವ ಸ್ಥಾನ ಕೊಟ್ಟರೂ ನಿಭಾಯಿಸುತ್ತೇನೆ. ಇಂತಹದೇ ಸಚಿವ ಸ್ಥಾನ ಬೇಕು ಎಂದು ಕೇಳುವುದಿಲ್ಲ. ತಮ್ಮ ಕ್ಷೇತ್ರದ ಜನ ಮತ್ತು ಯಡಿಯೂರಪ್ಪ ಹಾಗೂ ಸಂಘಟನೆಗೆ ಧನ್ಯವಾದ ತಿಳಿಸುತ್ತೇನೆ ಎಂದು ತಿಳಿಸಿದರು.