ಬೆಂಗಳೂರು: ವರ್ಚುವಲ್ ಕ್ಲಾಸ್ ರೂಂ ಪರಿಕಲ್ಪನೆಯ ಆ್ಯಪ್ ಆಧಾರಿತ ಆನ್ಲೈನ್ ಶಿಕ್ಷಣ ಸಂಸ್ಥೆ `ವಿದ್ಯಾವಿನ್’ನ ಕೈಪಿಡಿ ಬಿಡುಗಡೆ ಕಾರ್ಯಕ್ರಮ ಭಾನುವಾರ ಸಂಸ್ಥೆಯ ಕಚೇರಿಯಲ್ಲಿ ಜರಗಿತು.
ಕೈಪಿಡಿ ಬಿಡುಗಡೆ ಮಾಡಿದ ಸಂತ ಜೋಸೆಫ್ ಕಾಲೇಜಿನ ಪ್ರಾಂಶುಪಾಲ ಶ್ರೀಹರಿ ಅಯ್ಯಂಗಾರ್ ಮಾತನಾಡಿ, ಇಂದಿನ ನಮ್ಮ ಪ್ರಯತ್ನದಿಂದ ಮಕ್ಕಳು ಭವಿಷ್ಯದ ಅನರ್ಘ್ಯ ರತ್ನಗಳಾಗುವರು. ನಮ್ಮ ಗುರಿ ಹಾಗೂ ಮಕ್ಕಳ ಗುರಿ ಒಂದೇ ಆಗಿದ್ದರೆ ನಿಶ್ಚಿತವಾಗಿ ಭವಿಷ್ಯ ಉಜ್ವಲವಾಗಲಿದೆ. ನಿರಂತರವಾಗಿ ಈ ಪ್ರಯತ್ನವನ್ನು ಮುಂದುವರಿಸಬೇಕು. ಇದರಿಂದ ಲಕ್ಷಾಂತರ, ಕೋಟ್ಯಾಂತರ ಮಕ್ಕಳ ಬಾಳು ಹಸನಾಗಲಿದೆ ಎಂದರು.
ವಿದ್ಯಾವಿನ್ ಸಹಸಂಸ್ಥಾಪಕ ಅರುಣ್ ವಿ.ಎಸ್. ಸಂಸ್ಥೆಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿ, ವಿದ್ಯಾವಿನ್ ಪಠ್ಯಕ್ಕೆ `ವಾರ್ಕ್’ ಹಾಗೂ `೫ ಇ’ ಮಾದರಿಯನ್ನು ಬಳಸಿಕೊಳ್ಳಲಾಗಿದೆ. ಆ್ಯಪ್ ಆಧಾರಿತ ಆನ್ಲೈನ್ ಶಿಕ್ಷಣದ ಇತಿಹಾಸದಲ್ಲೇ ಮೊದಲ ಬಾರಿಗೆ ಡಬ್ಬಿಂಗ್ಗೆ ಆದ್ಯತೆ ನೀಡದೇ, ಕನ್ನಡದಲ್ಲೇ ಸರಳ ಪಾಠ ನೀಡಿರುವುದು ನಮ್ಮ ವಿಶೇಷತೆ. ಗಣಿತ ಮತ್ತು ವಿಜ್ಞಾನದ ಹಲವಾರು ಸಮಸ್ಯೆ – ಪರಿಹಾರವನ್ನು ಅಪ್ಪಟ ಕನ್ನಡ ಮಾಧ್ಯಮದಲ್ಲೇ ನಿರೂಪಿಸಿದ್ದೇವೆ. ತಂತ್ರಜ್ಞಾನದ ವಿಷಯದಲ್ಲೂ ವಿದ್ಯಾವಿನ್ ಹಿಂದೆ ಬಿದ್ದಿಲ್ಲ. ಕಡಿಮೆ ಬ್ಯಾಂಡ್ವಿಡ್ತ್ ಇರುವ ಗ್ರಾಮೀಣ ಭಾಗದಲ್ಲೂ ವಿದ್ಯಾರ್ಥಿಗಳು ಸುಲಭವಾಗಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವಂತಹ ವ್ಯವಸ್ಥೆಯನ್ನು ರೂಪಿಸಲಾಗಿದೆ. ತಾನೆಷ್ಟು ಓದಿಕೊಂಡಿದ್ದೇನೆ, ತನಗೆ ಓದುವುದಕ್ಕೆ ಇನ್ನೆಷ್ಟು ಬಾಕಿ ಇದೆ. ತಾನು ಓದಿಯೂ ಅರ್ಥವಾಗದೇ ಇರುವುದಕ್ಕೆ ಕಾರಣವೇನು ಎನ್ನುವುದನ್ನು ಸ್ವತಃ ಆತ್ಮಾವಲೋಕ ಮಾಡಿಕೊಳ್ಳುವುದಕ್ಕೂ ಇಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.
ವಿದ್ಯಾವಿನ್ ಸಂಸ್ಥಾಪಕ ಪ್ರಕಾಶ್ ಕೆ.ವಿ. ಮಾತನಾಡಿ, ಕನ್ನಡ ಮತ್ತು ಆಂಗ್ಲ ಮಾಧ್ಯಮಗಳಿಗೆ ಸಮಾನ ಅವಕಾಶ ಕೊಟ್ಟಿದ್ದೇವೆ. ಎರಡೂ ಮಾಧ್ಯಮಗಳ ಪ್ರತ್ಯೇಕ ತರಗತಿಗಳು ನಮ್ಮ ವಿಶೇಷತೆಯಾಗಿದೆ. ನಗರ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ನಡುವೆ ಇರುವ ಶೈಕ್ಷಣಿಕ ಅಂತರವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ವಿದ್ಯಾವಿನ್ ಶ್ರಮಿಸಲಿದೆ. ಈ ನಿಟ್ಟಿನಲ್ಲಿ ನುರಿತ ಶಿಕ್ಷಕರು, ಸಿಮ್ಯುಲೇಶನ್ ಮತ್ತು ಆ್ಯನಿಮೇಶನ್, ವೈಜ್ಞಾನಿಕ ಸಜೀವ ಪ್ರಯೋಗ, ಸುಲಲಿತ ವೀಡಿಯೋ ಚಿತ್ರಣ, ಸ್ವಮೌಲ್ಯಮಾಪನ ಮತ್ತು ಬಹುಆಯ್ಕೆ ಪ್ರಶ್ನೆಗಳು, ಆಡಿಯೋ ಬುಕ್ ಜೊತೆಯಲ್ಲಿ ಸಮಗ್ರ ಪ್ರಶ್ನೆಗಳು ಮತ್ತು ಉತ್ತರಗಳು, ಸಂವಾದಾತ್ಮಕ ಆನ್ಲೈನ್ ವೇದಿಕೆ, ಅಧ್ಯಾಯವಾರು ಪುನರ್ಮನನ ಮೊದಲಾದ ಗುಣಾತ್ಮಕ ಅಂಶಗಳು ವಿದ್ಯಾವಿನ್ನ ವಿಶೇಷತೆಯಾಗಿದೆ. ಸ್ಪರ್ಧಾತ್ಮಕ ಶುಲ್ಕ ವಿದ್ಯಾವಿನ್ನ ಇನ್ನೊಂದು ವಿಶೇಷತೆ ಎಂದರು.
ಬೆಂಗಳೂರಿನ ವಿವಿಧ ಭಾಗದ ಶಿಕ್ಷಕರು, ಶಿಕ್ಷಣಾಸಕ್ತರು ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ